ದೆಹಲಿ ಪ್ರವಾಸ, ಪ್ರಯಾಸ-5


ತಾಜ್ ಮಹಲ್ ಇರುವ ಅಂಗಣಕ್ಕೆ ಕಾಲಿಡುವ ಮೊದಲು ಚಪ್ಪಲಿ ತೆಗದು ಇರಿಸಬೇಕು ಅಥವಾ ಚಪ್ಪಲಿ ಹಾಕಲೇಬೇಕೆಂದಿದ್ದಲ್ಲಿ ಅವರು ಕೊಡುವ ಕಾಗದದ ಕವಚವನ್ನು ಧರಿಸಬೇಕು. ಇದು ತಾಜ್ ಮಹಲ್ ನ ನುಣುಪಾದ ಮೇಲ್ಮೈಯನ್ನು ಧೂಳುಗಳಿಂದ ಕಾಪಾಡುತ್ತದೆ. ಇದರ ಮಾಹಿತಿ ಯಿಲ್ಲದ ನಾವು ಚಪ್ಪಲಿಯನ್ನು ಚಪ್ಪಲಿ ಇಡುವ ಜಾಗದಲ್ಲಿ ಇಟ್ಟು ಅಂಗಣಕ್ಕೆ ಕಾಲಿಟ್ಟಾಗ ಕಂಡದ್ದು ಮೀಟರುಗಟ್ಟಲೆ  ಸರತಿ ಸಾಲಿನಲ್ಲಿ ನಿಂತ ಜನ ಸಾಗರ. ತಾಜ್ ಮಹಲ್ ಮೇಲಿನ ಅಂತಸ್ತಲ್ಲಿರುವವರೆಲ್ಲ ಇರುವೆಗಳಂತೆ ಕಾಣುತ್ತಿದ್ದರು. ಸಾಲಿನಲ್ಲಿ ನಿಂತು ತಾಜ್ ಒಳಗೆ ಹೋಗುವುದು ಅಸಾಧ್ಯವಾಗಿತ್ತು. ಜೊತೆಗೆ ನಮ್ಮೊಡನೆ ಪ್ರವಾಸಕ್ಕೆಂದು ಬಂದವರು ಈ ಜನಜಂಗುಳಿಯ ಮಧ್ಯದಲ್ಲಿ ಕಳೆದು ಹೋಗಿದ್ದರು. ನಾನು, ಅಮ್ಮ, ತನ್ವಿ,ನನ್ನಕ್ಕನ ಜೊತೆ ನಮ್ಮೂರಿನವರಾದ ಕ್ರಷ್ಣಪ್ಪ ಇದ್ದುದೇ ನಮಗೆ  ಸಮಾಧಾನ. "ಬಲೆ,ಬಲೆ ಎನ್ನ  ಪಿರಾವುಡ್ದ್ ಬಲೆ"  ಎನ್ನುತ್ತಾ ಸಾಲು ತಪ್ಪಿಸಿ ಮುಂದಿನ ಸಾಲು ಸೇರಲು ಪ್ರಯತ್ನಿಸಿದಾಗ ಅವರ ಬೈಗುಳ ಕೇಳಬೇಕಾಗಿ ಬಂತು. "ಬೇಡ, ಸಾಲು ತಪ್ಪಿಸಿ ಹೋಗುವುದು ಸರಿಯಲ್ಲ" ನಾನೆಂದೆ.  ಕೆಲ ಕ್ಷಣಗಳಲ್ಲಿ ಸಾಲಿನಲ್ಲಿ ನಿಂತಿದ್ದ ಜನರು ಗಡಿಬಿಡಿಯಲ್ಲಿ ಒಂದು ಮೂಲೆಗೆ ಓಡುವುದು ಕಂಡೆವು. ಏನೆಂದು ಅರಿವಾಗದೆ ನಾವೂ ಕೈ,ಕೈ ಹಿಡಿದುಕೊಂಡು ಓಡಲಾರಂಭಿಸಿದೆವು. ನಮ್ಮ ಹಿಂದೆಯೇ ಕ್ರಷ್ಣಪ್ಪ ಬಂದರು. ಪುನಃ ನೂಕು ನುಗ್ಗಲು. ಅಲುಗಾಡಲು ಆಗದಂಥಾ ಪರಿಸ್ಥಿತಿಯಲ್ಲಿ ನಾವು ನಾಲ್ವರೂ ಒಬ್ಬರ ಕೈ ಇನ್ನೊಬ್ಬರು ಹಿಡಿದು  ನಿಂತಿದ್ದೆವು.  ಜನರ ಗುಂಪು ಹಿಂದಿನಿಂದ ನೂಕಿದಂತೆ,ಮುಂದೆ ಮುಂದೆ ಹೋಗಲಾರಂಭಿಸಿದವು. ಈ ನೂಕು ನುಗ್ಗಲಿನಲ್ಲಿ ಕಲವರು ಗಾಳಿಯ ಕೊರತೆಯಿಂದ ತಲೆ ಸುತ್ತಿ ಬಿದ್ದರು. "ಬೇಡ, ಎಂತ ಹುಚ್ಚು ನಿಮಗೆ ತಾಜ್ ಮಹಲ್ ನೋಡಲಿಕ್ಕೆ ಬೇಕಾಗಿ ಪ್ರಾಣ ಕಳ್ಕೊಳ್ಳುವ ಕೆಲಸ" ಅಮ್ಮನ ಮಾತು ಕೇಳಿ ತನ್ವಿ ವಾಪಾಸು ಹೋಗೋಣವೆಂದು ಹಟ ಹಿಡಯಲಾರಂಭಿಸಿದಳು. ನನಗೂ ಗಾಬರಿ. ಅಕ್ಕ ಮಾತ್ರ ನೋಡಿಯೇ ಹೋಗುವ ಎಂದಳು. ಒಂದು  ಕ್ಷಣ ದೇವರನ್ನು ಸ್ಮರಿಸಿ ಮುಂದೆ ಸರಿದೆವು. ಕೊನೆಗೂ ಸ್ವಲ್ಪ ಹೊತ್ತಿನ ನಂತರ ಗುಂಪು ಕರಗಿ ಸಾಲಿನಲ್ಲಿ ಹೋಗಲಾರಂಭಿಸಿದೆವು.  ತಾಜ್ ಒಳಗೆ ಹೋಗುವ ದಾರಿಯಲ್ಲಿ ಮೆಟ್ಟಿಲನ್ನೇರಿ ಹೋಗಬೇಕು.

ಹಾಗೆ ಮೆಟ್ಟಿಲನ್ನೇರಿ ಹೋಗುವಾಗ ಪೂರ್ತಿಯಾಗಿ ಕತ್ತಲಾವರಿಸಿತ್ತು. ಯಮುನೆಯ ತೀರದಿಂದ ತಣ್ಣಗಿನ ಗಾಳಿ ಬೀಸುತ್ತಿತ್ತು. ನುಣುಪಾದ ತಂಪನೆಯ ಅಮ್ರೃತಶಿಲೆ ಪಾದದ ಅಡಿ ತಾಕುತ್ತಿತ್ತು. ಮೇಲೆ ಹೋದ ನಂತರ ಪುನಃ ಸಾಲು. ಹೇಗೋ ಮಾಡಿ ಒಳ ಹೊಕ್ಕರೆ ಪೂರ್ತಿ ಕತ್ತಲು. ಬೆಳಕಿನ ವ್ಯವಸ್ಥೆ ಹೊರಗೂ ಇಲ್ಲ, ಒಳಗೂ ಇಲ್ಲ. ಮೊಬೈಲ್ ನ ಬೆಳಕಿನಲ್ಲಿ ಸಾಧ್ಯ ವಾದದ್ದನ್ನು ನೋಡಿ, ಪರದೆಯಿಂದ ಆವ್ರತವಾದ ಮುಮ್ತಾಜ್ ಗೋರಿಗ ಕತ್ತಲಲ್ಲೇೆ ಒಂದು ಸುತ್ತು ಹೊಡೆದು ಹೊರಬಂದೆವು. ತಪ್ಪಿ ಹೋದ ನಮ್ಮ ಬಳಗದವರನ್ನು ಸೇರಿಕೊಂಡೆವು. ಅಲ್ಲಿಂದ  ಕೆಳಗಿಳಿದು ಬಂದರೂ ಮನಸ್ಸಿಗೆ ತ್ರೃಪ್ತಿ ಇಲ್ಲ.  ಏಕೆಂದರೆ ಅದು ಬರೀ ನಾಮಕಾವಸ್ಥೆಯ ವೀಕ್ಷಣೆಯಾಗಿತ್ತಷ್ಟೇ. ತಾಜ್ ನ ಬಾಹ್ಯ ಸೌಂದರ್ಯ ಕಂಡೆನಷ್ಟೇ, ಅದರ ನಿಗೂಢತೆಯನ್ನಲ್ಲ.  ಆಳ ತಿಳಿಯಲು ಇನ್ನಷ್ಟು ಸಮಯಾವಕಾಶ ಬೇಕಿತ್ತು.ಅಲ್ಲಿರುವ ಗೌಪ್ಯ ಕೋಣೆಗಳ ಬಗ್ಗೆ, ಷಹಜಹಾನ್ ಪ್ರೇಮದ ಬಗ್ಗ ಅನುಮಾನವಿತ್ತು. ಆ ಮುಚ್ಚಿದ ಕೋಣೆಯಲ್ಲಿ ಏನಿರಬಹುದು? ಮುಮ್ತಾಜ್ ಶವ? ಅಕ್ರಮ ಸಂಪತ್ತು? ಅಥವಾ ಶಿವ ದೇವಾಲಯ ಇರಬಹುದೇ? ಏಕೆಂದರೆ ಹಿಂದೂ ದೇವಾಲಯ ಹಚ್ಚಾಗಿ ಇರುವುದು ನದಿ ತೀರದಲ್ಲಿ. ಕತ್ತಲಾದ ಮೇಲೆ ಬೆಳಕಿನ ವ್ಯವಸ್ಥೆ ಏಕೆ ಮಾಡಲಿಲ್ಲ? ಸ್ವಾಭಾವಿಕವಾಗಿರಲೆಂದೇ? ಬೇರೇನಾದರೂ ಕಾರಣವಿರಬಹುದೇ? ನನ್ನ ಮನಸ್ಸಲ್ಲಿ ಪ್ರಶ್ನೆಗಳು ಏಳುತ್ತಿತ್ತು. ಉತ್ತರವಿಲ್ಲದ ಪ್ರಶ್ನೆಗಳು. ಐತಿಹಾಸಿಕ ಸ್ಥಳಗಳು ಸೌಂದರ್ಯವನ್ನಷ್ಟೇ ಅಲ್ಲದೆ, ನಿಗೂಢತೆಯನ್ನು ಹೊಂದಿರುತ್ತವೆ. ಸೌಂದರ್ಯ ಮಾತ್ರ ಸವಿಯುವವರಿಗೆ ಪ್ರಶ್ನೆಗಳಿಲ್ಲ. ಸತ್ಯದ ಆಳ ತಿಳಿಯ ಬಯಸುವವರಿಗೆ ಪ್ರಶ್ನೆಗಳಿವೆ, ಉತ್ತರವಿಲ್ಲ. ರಾತ್ರಿ ಸುಮಾರು ಎಂಟೂವರೆಗೆ ಹೊರಟ ನಾವು, ಬಸ್ ಚಾಲಕನ ಮರೆಗುಳಿತನದಿಂದಾಗಿ ಎರಡು ಗಂಟೆ ತಡವಾಗಿ ಮರಳುವಂತಾಯಿತು.
                                                                      ಮುಂದುವರೆಯುತ್ತದೆ...

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಆಪತ್ಬಾಂಧವ

ಜಾನಕಿ ಮತ್ತು ಅವಳ ನಾಯಿ

ಅಂತೂ ನಾನೂ ಒಂದು ಕವನ ಬರೆದೆ