ಮತ್ಸ್ಯಲೋಕದಲ್ಲಿ ಒಂದು ದಿನ!
ದೇವಸ್ಥಾನಕ್ಕೆ ಹೋಗದೆ ತುಂಬಾ ದಿನಗಳಾಗಿತ್ತು. ಎಲ್ಲಿಗಾದರೂ ಹೋಗಬೇಕು, ಎಲ್ಲಿಗೆ ಎಂದು ಒಂದಿಷ್ಟು ಸ್ಥಳಗಳ ಚರ್ಚೆಯಾಯಿತು. ಕಾರಿಂಜ? ಉಹೂಂ , ಈ ಬಿಸಿಲಿಗೆ ಮೆಟ್ಟಿಲು ಹತ್ತಿ ಇಳಿಯುವುದು ಬೇಡ ಎಂದಳು ಅಮ್ಮ. ಸುರಿಯ, ಕಟೀಲು, ಧರ್ಮಸ್ಥಳ, ಸೌತಡ್ಕ ಯಾವುದಾದರೂ ಒಂದಕ್ಕೆ ಹೋಗೋಣ ಎಂದಳು. "ಹೋದಲ್ಲಿಗೆ ಎಷ್ಟು ಸಲ ಹೋಗುವುದು, ಉಹೂಂ ಬೇಡ" ಎಂದೆ ನಾನು. ಹೀಗೆ ಯಾವುದೋ ಪುಸ್ತಕ ತಿರುವಿ ಹಾಕುತ್ತಿದ್ದಾಗ ಶಿಶಿಲೇಶ್ವರ ದೇವಸ್ಥಾನದ ಬಗೆಗಿನ ವಿವರಗಳು ಕಂಡವು. "ಇದ್ಯಾವ ದೇವಸ್ಥಾನ? ನಾವು ಹೋಗಲೇ ಇಲ್ಲವಲ್ಲ ಒಂದು ಸಲವೂ?" ನಾನೆಂದಾಗ "ಇಲ್ಲ, ತುಂಬಾ ವರ್ಷಗಳ ಹಿಂದೆ ಹೋಗಿದ್ದ ನೆನಪು " ಎಂದಳು ಅಮ್ಮ. ಅಲ್ಲಿನ ನದಿ,ತೂಗುಸೇತುವೆ, ಮುಖ್ಯವಾಗಿ ಮೀನುಗಳು ಅದಾಗಲೇ ನನ್ನ ಮನಸ್ಸನ್ನು ಆಕರ್ಷಿಸಿದ್ದವು. ಸರಿ, ಚಿಕ್ಕದಾಗಿ ಒಂದು ಪಿಕ್ನಿಕ್ ಆದ ಹಾಗೆ ಆಯ್ತು, ಅಲ್ಲಿಗೇ ಹೋಗುವುದೆಂದು ತೀರ್ಮಾನವಾಯಿತು. ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಶಿಶಿಲ ಎಂಬ ಗ್ರಾಮದಲ್ಲಿರುವ ಶ್ರೀ ಶಿಶಿಲೇಶ್ವರ ದೇವಸ್ಥಾನ, ಧರ್ಮಸ್ಥಳದಿಂದ ಸುಮಾರು ಮೂವತ್ತೆರಡು ಕಿ.ಮೀ ದೂರದಲ್ಲಿದೆ. ಮರುದಿನ ಬೆಳಿಗ್ಗೆ ಒಂಭತ್ತಕ್ಕೆ ಮನೆಯಿಂದ ಹೊರಟು, ಅಲ್ಲಿಗೆ ತಲುಪುವಾಗ ಗಂಟೆ ಹತ್ತೂಕಾಲು. ಹೊರಗಿನ ಜಗತ್ತು ಮತ್ತೆ ದೇವಸ್ಥಾನದ ಪರಿಸರದ ಮಧ್ಯೆ ಹರ...